Country
Trending

ಮುರಿದ್ ವಾಯುನೆಲೆಯ ಭೂಗತ ಬಂಕರ್‌ ಅದೆಷ್ಟು ಮುರಿದಿದೆ ಎಂಬುದನ್ನು ತೋರಿಸಿದ ಉಪಗ್ರಹ ಚಿತ್ರಗಳು!

ಹೊಸದಿಲ್ಲಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ “ಆಪರೇಷನ್‌ ಸಿಂಧೂರ” ಸೇನಾ ಕಾರ್ಯಾಚರಣೆ, ಪಾಕಿಸ್ತಾನದ ಸೈನ್ಯ ನೆಲೆಗಳಿಗೆ ಭಾರೀ ಹಾನಿ ಮಾಡಿರುವುದು ಸ್ಪಷ್ಟವಾಗಿದೆ. ಭಾರತದ ಕ್ಷಿಪಣಿಗಳು ಪಾಕಿಸ್ತಾನದ ಮುರಿದ್ ವಾಯುನೆಲೆಯಲ್ಲಿರುವ ಒಂದು ನಿರ್ಣಾಯಕ ಭೂಗತ ಸೌಲಭ್ಯವನ್ನು ಗುರಿಯಾಗಿಸಿಕೊಂಡಿದ್ದನ್ನು, ಉಪಗ್ರಹ ಚಿತ್ರಗಳು ದೃಢಪಡಿಸಿವೆ.ಈ ಉಪಗ್ರಹ ಚಿತ್ರಗಳು ಭಾರತದ ಗುಪ್ತಚರ ಸಾಮರ್ಥ್ಯ, ನಿಖರ ದಾಳಿ ನಡೆಸುವ ಕೌಶಲ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಇರುವ ಬದ್ಧತೆಯನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಮುರಿದ್ ವಾಯುನೆಲೆ ಆಯಕಟ್ಟಿನ ಸ್ಥಳವಾಗಿದ್ದು, ಇಲ್ಲಿ ಭೂಗರ್ಭದಲ್ಲಿ ನಿರ್ಮಿಸಲಾಗಿದ್ದ ವಿಶೇಷ ಸೌಲಭ್ಯವನ್ನು, ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಭಾರತ ಗುರಿಯಾಗಿಸಿಕೊಂಡಿದೆ. ಈ ಭೂಗತ ರಚನೆಯು ಪಾಕಿಸ್ತಾನದ ವ್ಯೂಹಾತ್ಮಕ ಕಾರ್ಯಕ್ರಮಗಳಿಗೆ, ಬಹುಶಃ ಶಸ್ತ್ರಾಸ್ತ್ರ ಸಂಗ್ರಹಣೆ, ಉಗ್ರಗಾಮಿಗಳಿಗೆ ತರಬೇತಿ ಅಥವಾ ನಿರ್ಣಾಯಕ ತಂತ್ರಜ್ಞಾನ ಅಭಿವೃದ್ಧಿಗೆ ಬಳಸಲಾಗುತ್ತಿತ್ತು ಎಂಬ ಶಂಕೆ ಇದೆ.ಭಾರತದ ನಡೆಸಿದ ದಾಳಿಯಲ್ಲಿ ಮುರಿದ್ದ ವಾಯುನೆಲೆಯ ಭೂಗತ ಸೌಲಭ್ಯಕ್ಕೆ ಹಾನಿಯಾಗಿರುವುದನ್ನು, ಉಪ್ರಗ್ರಹ ಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.

ಈ ಕಾರ್ಯಾಚರಣೆಯ ಯಶಸ್ಸಿಗೆ ಪ್ರಮುಖ ಸಾಕ್ಷ್ಯವಾಗಿ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ದಾಳಿಗೂ ಮುನ್ನ ತೆಗೆಯಲಾದ ಉಪಗ್ರಹ ಚಿತ್ರಗಳಲ್ಲಿ ಮುರಿದ್ ವಾಯುನೆಲೆಯಲ್ಲಿನ ಭೂಗತ ಸೌಲಭ್ಯದ ಪ್ರವೇಶ ದ್ವಾರಗಳು ಮತ್ತು ಮೇಲ್ಮೈ ರಚನೆಗಳು ಸ್ಪಷ್ಟವಾಗಿ ಕಾಣಿಸುತ್ತವೆ.ಆದರೆ ದಾಳಿಯ ನಂತರ ತೆಗೆಯಲಾದ ಚಿತ್ರಗಳಲ್ಲಿ, ಗುರಿಯಾಗಿಸಿಕೊಂಡಿದ್ದ ಭೂಗತ ಸೌಲಭ್ಯದ ನಿರ್ದಿಷ್ಟ ಸ್ಥಳದಲ್ಲಿ ದೊಡ್ಡ ಹಾನಿಯಾಗಿರುವುದು, ಕಟ್ಟಡಗಳು ಕುಸಿದಿರುವುದು ಮತ್ತು ಭೂಮಿಯ ಮೇಲ್ಮೈಯಲ್ಲಿ ಬದಲಾವಣೆಗಳಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.ಈ ಉಪಗ್ರಹ ಚಿತ್ರಗಳು ದಾಳಿಯು ಅತ್ಯಂತ ನಿಖರವಾಗಿ ನಡೆದಿರುವುದನ್ನು ಮತ್ತು ಉದ್ದೇಶಿತ ಗುರಿಯನ್ನು ಮಾತ್ರ ನಾಶಪಡಿಸಿರುವುದನ್ನು ಪ್ರಮಣೀಕರಿಸುತ್ತವೆ. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯು ಹಲವು ದೃಷ್ಟಿಕೋನಗಳಿಂದ ಮಹತ್ವದ್ದಾಗಿದೆ. ಶತ್ರುರಾಷ್ಟ್ರದ ಗಡಿಯೊಳಗೆ ನುಗ್ಗಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ನಿಖರವಾಗಿ ಗುರಿ ತಲುಪಿ ಅದನ್ನು ನಾಶಪಡಿಸುವ ಭಾರತದ ಸಾಮರ್ಥ್ಯವನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ.ಅಲ್ಲದೇ ಗಡಿಯಾಚೆಗಿನ ಭಯೋತ್ಪಾದನೆ ಅಥವಾ ಭಾರತದ ಭದ್ರತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂಬ ಕಠಿಣ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದೆ. ಇಂತಹ ಕ್ಲಿಷ್ಟಕರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಲು, ನಿಖರವಾದ ಗುಪ್ತಚರ ಮಾಹಿತಿ ಅತ್ಯಗತ್ಯ. ಇದರಲ್ಲಿ ಯಶಸ್ವಿಯಾಗಿರುವ ಭಾರತದ ಗುಪ್ತಚರ ಸಂಸ್ಥೆಗಳ ಕೌಶಲ್ಯವನ್ನು ಇದು ಎತ್ತಿ ತೋರಿಸುತ್ತದೆ.ಹಾನಿಗೊಳಗಾದ ಮುರಿದ್‌ ವಾಯುನೆಲೆ ಸಮೀಪದ ಭೂಗತ ಮಿಲಿಟರಿ ಸೌಲಭ್ಯದ ಉಪಗ್ರಹ ಚಿತ್ರಗಳ ವಿಶ್ಲೇಷಣೆಯು, ಗುರಿ ನಿರ್ಧಾರ ಮತ್ತು ನಿಖರ ದಾಳಿಗೆ ಬಳಸಲಾದ ತಂತ್ರಜ್ಞಾನವು ಭಾರತದ ತಾಂತ್ರಿಕ ಶ್ರೇಷ್ಠತೆಗೆ ಕನ್ನಡಿ ಹಿಡಿದಿದೆ.

ಇನ್ನು ಮುರಿದ ವಾಯುನೆಲೆಯ ಭೂಗತ ಸೌಲಭ್ಯಕ್ಕೆ ಹಾನಿಯಾಗಿರುವ ವರದಿಯ ಬಗ್ಗೆ, ಪಾಕಿಸ್ತಾನದಿಂದ ತಕ್ಷಣದ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಪಾಕಿಸ್ತಾನವು ಆರೋಪಗಳನ್ನು ನಿರಾಕರಿಸುವುದು ಅಥವಾ ಘಟನೆಯನ್ನು ತಳ್ಳಿಹಾಕುವುದು ವಾಡಿಕೆ. ಆದಾಗ್ಯೂ, ಉಪಗ್ರಹ ಚಿತ್ರಗಳು ಪ್ರಬಲ ಸಾಕ್ಷ್ಯವಾಗಿರುವುದರಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವು ಒತ್ತಡಕ್ಕೆ ಸಿಲುಕುವ ಸಾಧ್ಯತೆ ಇದೆ.

‘ಆಪರೇಷನ್ ಸಿಂಧೂರ’ದಂತಹ ಕಾರ್ಯಾಚರಣೆಗಳು ಭಾರತ-ಪಾಕಿಸ್ತಾನದ ನಡುವಿನ ಈಗಾಗಲೇ ಸೂಕ್ಷ್ಮವಾಗಿರುವ ಸಂಬಂಧಗಳ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಹೆಚ್ಚಿನ ಭದ್ರತಾ ಕಟ್ಟೆಚ್ಚರವಹಿಸಲಾಗಿದ್ದು, ಈ ಘಟನೆಯು ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದೆ. ದಕ್ಷಿಣ ಏಷ್ಯಾದಲ್ಲಿನ ಸ್ಥಿರತೆಯ ಬಗ್ಗೆ ಈಗಾಗಲೇ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.ಸದ್ಯಕ್ಕೆ ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿದೆಯಾದರೂ, ಪಾಕಿಸ್ತಾನವು ಮತ್ತೊಮ್ಮೆ ಭಾರತದ ವಿರುದ್ಧ ಭಯೋತ್ಪಾದನೆಯನ್ನು ಗುರಾಣಿಯಾಗಿ ಬಳಿಸಿದರೆ, ನೆರೆರಾಷ್ಟ್ರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಭಾರತ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬುದನ್ನು, ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಸ್ಪಷ್ಟಪಡಿಸಿದೆ. ಭಾರತ ವಿರೋಧಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನಕ್ಕೆ, ಈ ಮಿಲಿಟರಿ ಕಾರ್ಯಾಚರಣೆ ತಕ್ಕ ಪಾಠ ಕಲಿಸಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ, ಭಾರತದ ರಕ್ಷಣಾ ಮತ್ತು ವಿದೇಶಾಂಗ ನೀತಿಯಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ. ಇದು ಕೇವಲ ಸೇನಾ ಕಾರ್ಯಾಚರಣೆಯಷ್ಟೇ ಮಾತ್ರವಾಗಿರದೇ, ಭಾರತದ ಆತ್ಮವಿಶ್ವಾಸ, ತಾಂತ್ರಿಕ ಪ್ರಗತಿ ಮತ್ತು ರಾಷ್ಟ್ರೀಯ ಭದ್ರತೆಗೆ ಇರುವ ಅಚಲ ಬದ್ಧತೆಯ ಸಂಕೇತವಾಗಿದೆ.ಮುರಿದ್‌ ವಾಯುನೆಲೆ ಸಮೀಪದ ಭೂಗತ ಮಿಲಿಟರಿ ಸೌಲಭ್ಯಕ್ಕೆ ಹಾನಿ ಮಾಡಿರುವ ಕುರಿತು, ಭಾರತ ಸರ್ಕಾರದಿಂದ ಅಧಿಕೃತ ಹೇಳಿಕೆ ಅಥವಾ ಹೆಚ್ಚಿನ ವಿವರಗಳಿಗಾಗಿ ಕಾಯಬೇಕಾಗಿದೆ. ಆದಾಗ್ಯೂ, ಲಭ್ಯವಿರುವ ಉಪಗ್ರಹ ಚಿತ್ರಗಳು ಮತ್ತು ವರದಿಯ ವಿಶ್ಲೇಷಣೆಯು ಈ ಕಾರ್ಯಾಚರಣೆಯ ಗಂಭೀರತೆಯನ್ನು ಸೂಚಿಸುತ್ತವೆ.


Related Articles

Leave a Reply

Your email address will not be published. Required fields are marked *

Back to top button