
ಮಂಡ್ಯ, ಏಪ್ರಿಲ್ 04: ಅಪ್ಪ ಎಂಎಲ್ಎ, ಎಂಪಿ, ಮಿನಿಸ್ಟರ್ ಆದರೆ ಅವರ ಮಕ್ಕಳನ್ನು ರಾಜಕೀಯ (politics) ಕ್ಷೇತ್ರದಲ್ಲಿ ಬೆಳೆಸಬೇಕೆಂಬ ಹೆಬ್ಬಯಿಕೆ ಆ ನಾಯಕರಿಗೆ ಇದ್ದೆ ಇರುತ್ತೆ. ಅದೇ ರೀತಿ ಇದೀಗ ತಮ್ಮ ಪುತ್ರನನ್ನು ಲೋಕಲ್ ಪಾಲಿಟಿಕ್ಸ್ಗೆ ಇಳಿಸಿ ಮುಂಬರುವ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆ (LokSabha elections) ಹೊತ್ತಿಗೆ ತಯಾರಿ ಮಾಡಲು ಸಚಿವರೊಬ್ಬರು ಮುಂದಾಗಿದ್ದಾರೆ. ಹಾಗಿದರೆ ಆ ಸಚಿವ ಯಾರು, ಅವರ ಮಗನನ್ನು ಯಾವ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಸುತ್ತಿದ್ದಾರೆ ಎಂಬುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಜನರ ರಕ್ತದಲ್ಲಿ ರಾಜಕೀಯ ಬೆರೆತು ಹೋಗಿದೆ. ಈ ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬದ ಪ್ರಾಬಲ್ಯ ಸ್ವಲ್ಪ ಮುಂದೆಯೇ ಇದೆ. ಹೀಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಅಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡಲು ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿಸಿದ್ದರು. ನಿಖಿಲ್ ನಸೀಬು ಸರಿ ಇಲ್ಲದ್ದೋ ಅಥವಾ ಅವರ ಪಕ್ಷದ ನಾಯಕರ ನಡವಳಿಕೆಯಿಂದಲೋ ಸೋಲು ಅನುಭವಿಸಬೇಕಾಯಿತು. ಇದೀಗ ಮಂಡ್ಯ ಜಿಲ್ಲೆಯಲ್ಲಿ ತನ್ನದೇ ಆದ ವರ್ಚಸ್ಸು ಇಟ್ಟಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ತಮ್ಮ ಪುತ್ರ ಸಚಿನ್ ರನ್ನ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿಸಿದ್ದಾರೆ.
ಅಂದಹಾಗೆ ನಿಖಿಲ್ ಕುಮಾರಸ್ವಾಮಿ ಏಕಾಏಕಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಈ ತಪ್ಪು ತಮ್ಮ ಪುತ್ರನ ರಾಜಕೀಯ ಪ್ರವೇಶದಲ್ಲಿ ಆಗಬಾರದು ಎಂದು ಸಚಿವ ಚಲುವರಾಯಸ್ವಾಮಿ, ತಮ್ಮ ಪುತ್ರ ಸಚ್ಚಿನ್ನನ್ನು ಲೋಕಲ್ ಪಾಲಿಟಿಕ್ಸ್ ಮೂಲಕ ರಾಜಕೀಯ ಚದುರಂಗದ ಆಟಕ್ಕೆ ಎಂಟ್ರಿ ಕೊಡಿಸುತ್ತಿದ್ದಾರೆ. ಇಷ್ಟು ದಿನ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದ ಸಚಿನ್ ಚಲುವರಾಯಸ್ವಾಮಿ ಇದೀಗ ರಾಜಕೀಯ ರಂಗ ಪ್ರವೇಶ ಮಾಡಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಿದ್ಧತೆ ಆರಂಭಿಸಿದ್ದಾರೆ.
ಅಂದಹಾಗೆ ಈಗಾಗಲೇ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿರುವ ಸಚಿನ್ ಚಲುವರಾಯಸ್ವಾಮಿ ವಾರದಲ್ಲಿ ಮೂರರಿಂದ ನಾಲ್ಕು ದಿನ ನಾಗಮಂಗಲದಲ್ಲಿ ಇರುತ್ತಿದ್ದಾರೆ. ನಾಗಮಂಗಲದಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆ, ಕಾರ್ಯಕ್ರಮಗಳು, ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದರ ಮುಂದುವರಿದ ಭಾಗ ಎಂಬಂತೆ ಚಲುವರಾಯಸ್ವಾಮಿ ಪುತ್ರ ಸಚಿನ್ ರನ್ನ ನಾಗಮಂಗಲ ತಾಲೂಕಿನ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಸಲು ಮುಂದಾಗಿದ್ದಾರೆ. ಈ ಮೂಲಕ ಚಲುವರಾಯಸ್ವಾಮಿ ತಮ್ಮ ಮಗನ ರಾಜಕೀಯ ಜೀವನಕ್ಕೆ ಭದ್ರ ಬುನಾದಿ ಹಾಕಲು ಲೋಕಲ್ ಪಾಲಿಟಿಕ್ಸ್ಗೆ ಇಳಿಸಿದ್ದಾರೆ.
ಮುಂಬರುವ ವಿಧಾನಸಭಾ ಕ್ಷೇತ್ರ, ಲೋಕಸಭಾ ಕ್ಷೇತ್ರದ ಚುನಾವಣೆ ಹೊತ್ತಿಗೆ ಸಂಪೂರ್ಣ ತಯಾರಿ ಮಾಡಲು ಚಲುವರಾಯಸ್ವಾಮಿ ಪಣ ತೊಟ್ಟಿದ್ದಾರೆ. ಅದಕ್ಕೆ ಮುನ್ನುಡಿಯಾಗಿ ಸಚಿನ್ ಚಲುವರಾಯಸ್ವಾಮಿ ಇಂದು ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಪತ್ನಿ ಆಕಾಂಕ್ಷ, ಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ ಸೇರಿದಂತೆ ಅಪಾರ ಬೆಂಬಲಿಗರೊಡನೆ ನಾಮಪತ್ರ ಸಲ್ಲಿಸಿದ್ದರು.
ಒಟ್ಟಾರೆ ತಮ್ಮ ಮಗನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡುವಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೂರು ಬಾರಿ ಎಡವಿದ್ದಾರೆ. ಇದೀಗ ಚಲುವರಾಯಸ್ವಾಮಿ ಮಗನ ರಾಜಕೀಯ ಭವಿಷ್ಯ ಕಟ್ಟಿಕೊಡಲು ಪಾಲಿಟಿಕ್ಸ್ನ ಮೊದಲ ಅಕ್ಷರದಿಂದ ಪ್ರಾರಂಭ ಮಾಡ್ತಾ ಇದ್ದಾರೆ. ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತೆ ಅನ್ನೋದನ್ನ ಕಾದುನೋಡ್ಬೇಕಿದೆ.