
ಬೆಂಗಳೂರು: ಈ ವರ್ಷ ಇನ್ನೇನು ಬೇಸಿಗೆ ಆರಂಭವಾಗುವುದಕ್ಕೂ ಮುನ್ನವೇ ಕರ್ನಾಟಕದ (Karnataka) ವಿವಿಧಡೆ ತಾಪಮಾನದಲ್ಲಿ (Temperature) ತೀವ್ರ ಏರಿಕೆಯಾಗಿದೆ. ಹಲವೆಡೆ ಉಷ್ಣ ಅಲೆ (Heat Wave) ಆರಂಭವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ಭಾರತದ ಪ್ರಮುಖ ನಗರಗಳಿಗೆ ಸಂಬಂಧಿಸಿ ಆಘಾತಕಾರಿ ವರದಿಯೊಂದು ಬಹಿರಂಗವಾಗಿದೆ. ಉಷ್ಣಾಘಾತಕ್ಕೆ ಸಂಬಂಧಿಸಿದ ಸಾವುಗಳ ಸಂಖ್ಯೆ ಬೆಂಗಳೂರು ಸೇರಿದಂತೆ ಭಾರತದ ನಗರಗಳಲ್ಲಿ ಹೆಚ್ಚಾಗಬಹುದು ಎಂದು ಅಧ್ಯಯನ ವರದಿ ಬಹಿರಂಗಪಡಿಸಿದೆ. ಉಷ್ಣ ಅಲೆಗಳನ್ನು ತಡೆಯುವ ನಿಟ್ಟಿನಲ್ಲಿ ದೀರ್ಘಾವಧಿಯ ಪರಿಹಾರ ಕ್ರಮಗಳನ್ನು ತಕ್ಷಣದಿಂದಲೇ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ವರದಿ ತಿಳಿಸಿದೆ.ಮುಂಬರುವ ವರ್ಷಗಳಲ್ಲಿ ಭಾರತದ ನಗರಗಳಲ್ಲಿ ಉಷ್ಣ ಅಲೆ ಮುಂದುವರೆಯಲಿದೆ. ಇದಕ್ಕೆ ತಕ್ಷಣವೇ ದೀರ್ಘಾವಧಿಯ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಇಲ್ಲವಾದಲ್ಲಿ ತಾಪಮಾನ ಸಂಬಂಧಿ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂದು ಕಿಂಗ್ಸ್ ಕಾಲೇಜ್ ಲಂಡನ್, ಹಾರ್ವರ್ಡ್ ವಿಶ್ವವಿದ್ಯಾಲಯ, ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಮತ್ತು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನ ವರದಿ ತಿಳಿಸಿದೆ.ಹವಾಮಾನ ಮಾದರಿಗಳ ಆಧಾರದಲ್ಲಿ ಮಾಡಲಾದ ಅಧ್ಯಯನ ವರದಿಯಲ್ಲಿ, 2011ರ ಜನಗಣತಿ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಬೆಂಗಳೂರು, ದೆಹಲಿ, ಫರೀದಾಬಾದ್, ಗ್ವಾಲಿಯರ್, ಕೋಟ, ಲುಧಿಯಾನ, ಮೀರತ್, ಸೂರತ್ ನಗರಗಳನ್ನು ಹೆಸರಿಸಲಾಗಿದೆ.12.4 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಮುಂಬೈ ಉಷ್ಣ ಅಲೆಗಳ ಹೆಚ್ಚು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ತಾಪಮಾನ ಮತ್ತು ಹೆಚ್ಚಿನ ತೇವಾಂಶದ ಕಾರಣ ನಗರದಲ್ಲಿ ಬಿಸಿಲಿನ ಆಘಾತ ಹೆಚ್ಚಾಗಲಿದೆ ಎಂದು ಅಧ್ಯಯನ ವರದಿ ಹೇಳಿದೆ. ಸಂಭಾವ್ಯ ದುರಂತಗಳನ್ನು ತಡೆಯುವುದಕ್ಕಾಗಿ ಈಗಲೇ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಅಧ್ಯಯನ ವರದಿ ಸಲಹೆ ನೀಡಿದೆ.ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 33.9 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21.4 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಬಿಸಿಲಿನ ವಾತಾವರಣ ಇರಲಿದೆ. ಗುರುವಾರ ತಾಪಮಾನ ಸ್ವಲ್ಪ ಕಡಿಮೆಯಾಗಲಿದ್ದು, ಗರಿಷ್ಠ 33.5 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20.8 ಡಿಗ್ರಿ ಸೆಲ್ಸಿಯಸ್ ಇರಲಿದೆ. ಸರಾಸರಿ ಆರ್ದ್ರತೆಯ ಮಟ್ಟ ಶೇ 46, ಸಮತೋಲಿತ ವಾತಾವರಣ ಇರಲಿದೆ. ಆದಾಗ್ಯೂ ವಾರಾಂತ್ಯದ ದಿನಗಳಲ್ಲಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.