Country
Trending

100 ಕಿ.ಮೀ ದೂರವಿದ್ರೂ ಗುರಿ ತಲುಪಿ ಶತ್ರುಗಳ ನಾಶಪಡಿಸಬಲ್ಲ ಭಾರತದ ಸ್ಮಾರ್ಟ್ ಆಯುಧ

ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಭಾರತ ಒಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಭಾರತ ದೇಶೀಯವಾಗಿ ನಿರ್ಮಿಸಿರುವ ಗೌರವ್ ಗ್ಲೈಡ್ ಬಾಂಬನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿರುವ ಗೌರವ್ ಗ್ಲೈಡ್ ಬಾಂಬಿನ ಪರೀಕ್ಷೆ ಎಪ್ರಿಲ್‌ 8 ಮತ್ತು ಎಪ್ರಿಲ್ 10ರ ನಡುವೆ ಸುಖೋಯಿ ಸು-30ಎಂಕೆಐ ಯುದ್ಧ ವಿಮಾನದ ಮೂಲಕ ನಡೆಸಲಾಯಿತು. ಈ ಬಾಂಬ್ ನೂರು ಕಿಲೋಮೀಟರ್‌ಗಳಿಗೂ ದೂರದಿಂದ ತನ್ನ ಗುರಿಯ ಮೇಲೆ ಅತ್ಯಂತ ನಿಖರವಾದ ದಾಳಿ ನಡೆಸಿತು. ಈ ಯಶಸ್ವಿ ಪರೀಕ್ಷೆ ಭಾರತಕ್ಕೆ ಕೇವಲ ತಾಂತ್ರಿಕ ಗೆಲುವು ಮಾತ್ರವಲ್ಲದೆ, ದೇಶದಲ್ಲೇ ಆಧುನಿಕ ತಂತ್ರಜ್ಞಾನದ ಆಯುಧಗಳನ್ನು ನಿರ್ಮಿಸುವಲ್ಲಿ ಹೆಚ್ಚುತ್ತಿರುವ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಸಾಂಪ್ರದಾಯಿಕ ಬಾಂಬ್‌ಗಳನ್ನು ವಿಮಾನದಿಂದ ಪ್ರಯೋಗಿಸಿದರೆ, ಅವುಗಳು ಭೂಮಿಯ ಮೇಲೆ ಲಂಬವಾಗಿ ಬೀಳುತ್ತವೆ. ಆದರೆ ಗ್ಲೈಡ್ ಬಾಂಬ್‌ಗಳು ಗಾಳಿಯಲ್ಲಿ ಬಹಳಷ್ಟು ದೂರ ಯಶಸ್ವಿಯಾಗಿ ಸಾಗಬಲ್ಲವು. ಈ ಬಾಂಬ್‌ಗಳಿಗೆ ಸಣ್ಣ ರೆಕ್ಕೆಗಳನ್ನು ಅಳವಡಿಸಲಾಗಿದ್ದು, ಅವುಗಳು ನೇರವಾಗಿ ಬೀಳುವ ಬದಲು ಗಾಳಿಯಲ್ಲಿ ದೂರಕ್ಕೆ ಕ್ರಮಿಸಬಲ್ಲವು. ಗ್ಲೈಡ್ ಬಾಂಬ್‌ಗಳು ಇಂಜಿನ್‌ಗಳನ್ನು ಹೊಂದಿರುವುದಿಲ್ಲ. ಬದಲಿಗೆ, ಅವುಗಳು ಎತ್ತರದಲ್ಲಿ, ಸಾಮಾನ್ಯವಾಗಿ 40,000 ಅಡಿಗಳಿಗೂ ಮೇಲೆ ಹಾರಾಡುವ ಯುದ್ಧ ವಿಮಾನದಿಂದ ಎಸೆದಾಗ ಸೃಷ್ಟಿಯಾಗುವ ವೇಗವನ್ನು ಬಳಸಿಕೊಂಡು 100 ಕಿಲೋಮೀಟರ್‌ಗೂ ಹೆಚ್ಚು ದೂರ ಸಾಗಿ, ತನ್ನ ಗುರಿಯ ಮೇಲೆ ನಿಖರವಾಗಿ ದಾಳಿ ನಡೆಸುತ್ತವೆ. ಈ ಬಾಂಬಿನ ಅತಿದೊಡ್ಡ ಅನುಕೂಲತೆ ಏನೆಂದರೆ, ಈ ಬಾಂಬನ್ನು ಪ್ರಯೋಗಿಸುವ ಯುದ್ಧ ವಿಮಾನ ಯುದ್ಧ ರಂಗದಿಂದ ಬಹಳ ದೂರದಿಂದಲೇ ಬಾಂಬನ್ನು ಪ್ರಯೋಗಿಸಬಹುದು. ಇದರಿಂದಾಗಿ ಪೈಲಟ್ ಮತ್ತು ವಿಮಾನ ಸುರಕ್ಷಿತವಾಗಿದ್ದು, ಗುರಿಯ ಮೇಲೆ ನಿಖರ ದಾಳಿ ನಡೆಸುತ್ತವೆ.

ಗೌರವ್ ಒಂದು 1,000 ಕೆಜಿ ಕ್ಲಾಸ್ ಸ್ಮಾರ್ಟ್ ಬಾಂಬ್ ಆಗಿದ್ದು, ಎರಡು ನಿರ್ದೇಶನ ವ್ಯವಸ್ಥೆಗಳನ್ನು ಹೊಂದಿದೆ. ಇದು ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಮತ್ತು ಐಎನ್ಎಸ್ (ಇನರ್ಷ್ಯಲ್ ನ್ಯಾವಿಗೇಶನ್ ಸಿಸ್ಟಮ್) ಗಳನ್ನು ಬಳಸಿಕೊಂಡು, ಕಷ್ಟಕರ ವಾತಾವರಣದಲ್ಲಿ ಮತ್ತು ಶತ್ರುಗಳು ಸಂಕೇತಗಳನ್ನು ಸ್ಥಗಿತಗೊಳಿಸಲು ಪ್ರಯತ್ನಿಸಿದಾಗಲೂ ತಡೆಯಿಲ್ಲದೆ ತನ್ನ ಪಥದಲ್ಲೇ ಉಳಿಯುತ್ತದೆ. ಇದರಿಂದಾಗಿ ಯಾವುದೇ ಹವಾಮಾನ ಸನ್ನಿವೇಶದಲ್ಲೂ ಬಾಂಬ್ ಅತ್ಯಂತ ನಿಖರವಾಗಿ ದಾಳಿ ನಡೆಸುತ್ತದೆ. ಇಂತಹ ಅಸಾಧಾರಣ ನಿಖರತೆ ಗೌರವ್ ಅನ್ನು ಒಂದು ಮಹತ್ವದ ಆಯುಧವನ್ನಾಗಿಸಿದ್ದು, ಇದನ್ನು ಸಾಕಷ್ಟು ದೂರದಿಂದ ಉಡಾವಣೆಗೊಳಿಸಿ, ಶತ್ರುಗಳ ರೇಡಾರ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಕಣ್ಣಿಗೆ ಬೀಳದಂತೆ ದಾಳಿ ನಡೆಸಲು ಸಾಧ್ಯವಾಗುತ್ತದೆ.

ಗೌರವ್ ಬಾಂಬಿನ ಇನ್ನೊಂದು ಗಮನಾರ್ಹ ಅಂಶವೆಂದರೆ, ಇದನ್ನು ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ಧಿ ಪಡಿಸಲಾಗಿದೆ. ಈ ಬಾಂಬ್ ನಿರ್ಮಾಣ ಯೋಜನೆಯನ್ನು ಹೈದರಾಬಾದಿನಲ್ಲಿರುವ ಡಿಆರ್‌ಡಿಒದ ರಿಸರ್ಚ್ ಸೆಂಟರ್ ಇಮಾರತ್‌ನಲ್ಲಿ (ಆರ್‌ಸಿಐ) ನಿರ್ಮಿಸಲಾಗಿದೆ. ಅದಾನಿ ಡಿಫೆನ್ಸ್ ಸಿಸ್ಟಮ್ಸ್ & ಟೆಕ್ನಾಲಜೀಸ್, ಭಾರತ್ ಫೋರ್ಜ್, ಮತ್ತು ಬಹಳಷ್ಟು ಮೈಕ್ರೋ, ಸ್ಮಾಲ್ ಆ್ಯಂಡ್ ಮೀಡಿಯಂ ಎಂಟರ್‌ಪ್ರೈಸಸ್‌ಗಳು (ಎಂಎಸ್ಎಂಇ) ಈ ಬಾಂಬನ್ನು ನಿರ್ಮಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ. ಈ ಸರ್ಕಾರಿ – ಖಾಸಗಿ ಸಹಯೋಗ ಯಡಿ ದೇಶೀಯವಾಗಿ ರಕ್ಷಣಾ ಉತ್ಪನ್ನಗಳ ನಿರ್ಮಾಣಕ್ಕೆ ಉತ್ತಮ ಉದಾಹರಣೆಯಾಗಿದೆ.

ಗೌರವ್ ಬಾಂಬಿನ ಯಶಸ್ವಿ ಅಭಿವೃದ್ಧಿ ಬಹಳಷ್ಟು ಕಾರ್ಯತಂತ್ರದ ಮಹತ್ವ ಹೊಂದಿದೆ. ಚೀನಾ ಮತ್ತು ಪಾಕಿಸ್ತಾನಗಳು ಈಗಾಗಲೇ ಇದೇ ರೀತಿಯ ಆಯುಧಗಳನ್ನು ಪರೀಕ್ಷಿಸಿದ್ದು, ಚೀನಾದ ಎಲ್ಎಸ್ ಮತ್ತು ಎಫ್‌ಟಿ ಸರಣಿಯ ಗ್ಲೈಡ್ ಬಾಂಬ್‌ಗಳು, ಮತ್ತು ಪಾಕಿಸ್ತಾನದ ಎಚ್4 ಮತ್ತು ತಕ್‌ಬೀರ್ ಬಾಂಬ್‌ಗಳು ಅವುಗಳಿಗೆ ಉದಾಹರಣೆಯಾಗಿವೆ. ಈ ಬಾಂಬ್‌ಗಳು ಸಹ ಜಿಪಿಎಸ್ ಹಾಗೂ ಎನ್‌ಪಿಎಸ್ ನಿರ್ದೇಶನ ವ್ಯವಸ್ಥೆಗಳನ್ನು ಒಳಗೊಂಡಿದ್ದು, ಗೌರವ್ ಮಾದರಿಯ ವ್ಯಾಪ್ತಿಯನ್ನು ಹೊಂದಿವೆ. ಗೌರವ್ ಗ್ಲೈಡ್ ಬಾಂಬ್ ಈಗ ಭಾರತದ ಬತ್ತಳಿಕೆಗೆ ಸೇರಿದ್ದು, ಇದರ ಮೂಲಕ ಭಾರತ ಪ್ರಾದೇಶಿಕ ಸಾಮರ್ಥ್ಯದಲ್ಲಿ ಚೀನಾ – ಪಾಕಿಸ್ತಾನಗಳನ್ನು ಸರಿಗಟ್ಟಿದ್ದು, ಸ್ಥಳೀಯ ಪ್ರತಿಭೆಗಳು, ಉದ್ಯಮಗಳು, ಮತ್ತು ಸ್ವದೇಶೀ ತಂತ್ರಜ್ಞಾನಗಳನ್ನು ಬಳಸಿಕೊಂಡು ಗೌರವ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.ಭಾರತದ ಈ ಸಾಧನೆಗೆ ದೇಶದ ರಕ್ಷಣಾ ನಾಯಕತ್ವ ಬಹಳಷ್ಟು ಆಸಕ್ತಿ ತೋರಿದೆ. ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಡಿಆರ್‌ಡಿಒ, ಭಾರತೀಯ ವಾಯು ಸೇನೆ, ಮತ್ತು ಸಹಯೋಗಿ ಕಂಪನಿಗಳನ್ನು ಶ್ಲಾಘಿಸಿದ್ದು, ಗೌರವ್ ಭಾರತದ ಯುದ್ಧ ಸಾಮರ್ಥ್ಯವನ್ನು ವೃದ್ಧಿಸಲಿದೆ ಎಂದಿದ್ದಾರೆ. ರಕ್ಷಣಾ ಸಚಿವರು ಗೌರವ್ ಭಾರತದ ಯುದ್ಧ ಸಾಮರ್ಥ್ಯವನ್ನು ವೃದ್ಧಿಸಲಿದೆ ಎಂದು ಬಣ್ಣಿಸಿದ್ದಾರೆ. ಡಿಆರ್‌ಡಿಒ ಮುಖ್ಯಸ್ಥರಾದ ಡಾ. ಸಮೀರ್ ವಿ ಕಾಮತ್ ಅವರು ಗೌರವ್ ಗ್ಲೈಡ್ ಬಾಂಬ್ ಯಶಸ್ಸನ್ನು ಭಾರತದ ರಕ್ಷಣಾ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳಿಗೆ ಹೆಮ್ಮೆಯ ಕ್ಷಣ ಎಂದು ಕರೆದಿದ್ದಾರೆ.

ಗೌರವ್ ಕೇವಲ ಒಂದು ಬಾಂಬ್ ಮಾತ್ರವಲ್ಲದೆ, ಭಾರತದ ರಕ್ಷಣಾ ಚಿತ್ರಣದಲ್ಲಿನ ಬದಲಾವಣೆಯನ್ನು ಪ್ರತಿನಿಧಿಸುತ್ತಿದೆ. ವಿದೇಶೀ ನಿರ್ಮಾಣದ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿರುವ ಬದಲು, ಭಾರತ ತಾನೇ ಆಧುನಿಕವಾದ, ಕಾರ್ಯತಂತ್ರದ ಆಯುಧಗಳನ್ನು ನಿರ್ಮಿಸಬಲ್ಲೆ ಎಂದು ಸಾಬೀತುಪಡಿಸಿದೆ. ಇಂದಿನ ಜಗತ್ತಿನಲ್ಲಿ ಅಪಾಯಗಳು ಬಹಳಷ್ಟು ದೂರದಿಂದ ಬರಬಲ್ಲವಾಗಿದ್ದು, ಶತ್ರುಗಳ ರಕ್ಷಣಾ ವ್ಯವಸ್ಥೆಗಳೂ ಹೆಚ್ಚು ಹೆಚ್ಚು ಆಧುನಿಕಗೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಗೌರವ್‌ನಂತಹ ಆಯುಧವನ್ನು ಹೊಂದುವುದು ಭಾರತಕ್ಕೆ ಮಹತ್ವದ ಮಿಲಿಟರಿ ಮೇಲುಗೈ ಒದಗಿಸುತ್ತದೆ. ಗೌರವ್ ಪೈಲಟ್‌ಗಳನ್ನು ಹೆಚ್ಚಿನ ಅಪಾಯಗಳಿಗೆ ತೆರೆದಿಡದೆ, ಆಮದು ಆಯುಧಗಳ ಮೇಲಿನ ಅವಲಂಬನೆ ಕಡಿಮೆಗೊಳಿಸಿ, ಶತ್ರುಗಳ ಮೇಲೆ ನಿಖರ ದಾಳಿ ನಡೆಸಲು ಅನುವು ಮಾಡಿಕೊಡುತ್ತದೆ.ಸರಳವಾಗಿ ಹೇಳುವುದಾದರೆ, ಗೌರವ್ ಗ್ಲೈಡ್ ಬಾಂಬ್ ರಕ್ಷಣಾ ಕ್ಷೇತ್ರದಲ್ಲಿ ಮಾತ್ರವಲ್ಲದೆ, ದೇಶದ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯಲ್ಲೂ ಭಾರತದ ಪ್ರಗತಿಯ ಸಂಕೇತವಾಗಿದೆ. ಈ ಮೂಲಕ ಭಾರತ ತಾನು ಸ್ವತಃ ನಿರ್ಮಿಸಿರುವ ಆಯುಧಗಳನ್ನು ಬಳಸಿಕೊಂಡು ತನ್ನ ರಕ್ಷಣೆ ನಡೆಸಲು ಸಿದ್ಧವಾಗಿದ್ದೇನೆ ಎಂಬ ಸಂದೇಶವನ್ನೂ ರವಾನಿಸಿದೆ.

Related Articles

Leave a Reply

Your email address will not be published. Required fields are marked *

Back to top button