ವಿದೇಶ
Trending

ಕ್ಷಿಪಣಿ ಹಾರಿಸಲಿಲ್ಲ, ಬಾಂಬ್‌ ಬೀಳಿಸಲಿಲ್ಲ, ಪಾಕ್‌ ಈಗಲೇ ಏಕಿಷ್ಟು ಕಂಪಿಸಿದೆ?

  • ಭಾರತವು ಪಾಕಿಸ್ತಾನದ ವಿರುದ್ಧ ಪರೋಕ್ಷ ಯುದ್ಧವನ್ನು ಆರಂಭಿಸಿದೆ
  • ಪಾಕಿಸ್ತಾನದ ಕೃಷಿ, ಜಲ ವಿದ್ಯುತ್, ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ದೊಡ್ಡ ಪೆಟ್ಟು ತಂದಿದೆ.
  • ಅಂತರರಾಷ್ಟ್ರೀಯ ಹಣಕಾಸು ನಿಧಿ ಮೂಲಕ ಪಾಕಿಸ್ತಾನಕ್ಕೆ ದೊರೆಯುವ ಆರ್ಥಿಕ ನೆರವನ್ನು ಸ್ಥಗಿತಗೊಳಿಸಲು ಭಾರತ ಪ್ರಯತ್ನಿಸುತ್ತಿದೆ

ಚಾಣಕ್ಯ ಈ ಮಾತನ್ನು ಹೇಳಿ ಎರಡು ಸಾವಿರ ವರುಷಗಳೇ ಸರಿದವು. ಆದರೇನಂತೆ? ಭಾರತವು ಪಾಕಿಸ್ತಾನದ ವಿಚಾರದಲ್ಲೇ ಚಾಣಕ್ಯನ ಹೆಜ್ಜೆಯನ್ನೇ ಇಡುತ್ತಿದೆ. ಪಹಲ್ಗಾಮ್‌ನ ನರಮೇಧಕ್ಕೆ ಪಾಕ್‌ ಉಗ್ರರೇ ನೇರಕಾರಣ ಎಂಬುದು ಗೊತ್ತಾದ ಮೇಲೂ ಭಾರತ ಮುನಿಸು ಹೊರಹಾಕಿದರೂ, ಪಾಕ್‌ ಮೇಲೆ ತಕ್ಷಣಕ್ಕೆ ಮುಗಿ ಬೀಳಲಿಲ್ಲ.ಆದರೆ, ಪಾಕ್‌ ಈ 14 ದಿನಗಳಲ್ಲಿ ಸರಿಯಾಗಿ ನಿದ್ದೆಯನ್ನೇ ಮಾಡಿಲ್ಲ. ಭಾರತ ಎಲ್ಲಿ ತನ್ನ ಮೇಲೆ ಯುದ್ಧ ಸಾರುತ್ತದೋ, ಎಂದುಕೊಂಡು ಮೊದಲಿನಿಂದಲೂ ತಾನು ಯುದ್ಧಕ್ಕೆ ರೆಡಿ, ತನ್ನ ಬಳಿ ಅಣು ಬಾಂಬ್‌ ಇದೆ, ಮುಂತಾದ ಹೇಳಿಕೆ ನೀಡುತ್ತಲೇ ಬಂತು. ಇಷ್ಟಾದ ಮೇಲೂ ಭಾರತವೇನು ಸಾಂಪ್ರದಾಯಿಕ ಯುದ್ಧಕ್ಕೆ ಇಳಿಯಲಿಲ್ಲ. ಪಾಕ್‌ ಮೇಲೆ ಕ್ಷಿಪಣಿ ಹಾರಿಸಲಿಲ್ಲ, ಬಾಂಬನ್ನೂ ಬೀಳಿಸಲಿಲ್ಲ.ಹಾಗಾದರೆ, ಭಾರತ ಯುದ್ಧ ಆರಂಭಿಸಲಿಲ್ಲವೇ? ಖಂಡಿತಾ ಸಾರಿದೆ. ಅದು ಪರೋಕ್ಷ ಯುದ್ಧ! ನೇರ ಸಂಗ್ರಾಮದ ಬದಲು ಪರೋಕ್ಷವಾಗಿ ಆರ್ಥಿಕ, ಜಲ ಹಾಗೂ ರಾಜತಾಂತ್ರಿಕ ಸಮರದ ಮೂಲಕ ಶತ್ರು ದೇಶದ ಬೆನ್ನೆಲುಬು ಮುರಿಯುವ ಚಾಣಕ್ಯ ತಂತ್ರ ಅನುಸರಿಸಿದೆ.

ಉಗ್ರ ಪೋಷಕ ಪಾಕ್‌ ವಿರುದ್ಧ ಭಾರತ ಮೊದಲು ಸಾರಿದ್ದೇ ಜಲಸಮರ. 65 ವರ್ಷಗಳ ಹಿಂದೆ ರೂಪುಗೊಂಡಿದ್ದ ಸಿಂಧು ಜಲ ಒಪ್ಪಂದವನ್ನು ಅಮಾನತುಗೊಳಿಸಿ, ನೆರೆಯ ದೇಶದ ಜೀವನಾಡಿಯಾದ ನೀರನ್ನು ಸ್ಥಗಿತಗೊಳಿಸಿತು. ಚೆನಾಬ್‌, ಸಿಂಧು, ಝೀಲಂ ನದಿಗಳ ನೀರನ್ನು ನಿಲ್ಲಿಸುವ ಮೂಲಕ ಜಲಘಾತ ನೀಡಿದೆ. ಸಿಂಧು ಕಣಿವೆ ನೀರು ಸ್ಥಗಿತದಿಂದ ಪಾಕಿಸ್ತಾನದ ಕೃಷಿ, ಜಲ ವಿದ್ಯುತ್‌, ಕುಡಿಯುವ ನೀರಿನ ವ್ಯವಸ್ಥೆಗೆ ದೊಡ್ಡ ಪೆಟ್ಟು ಬಿದ್ದಿದೆ.ಸಿಂಧು ನದಿ ನೀರು ಅವಲಂಬಿಸಿದ್ದ ಶೇ.80ರಷ್ಟು ಕೃಷಿ ಭೂಮಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಪಾಕಿಸ್ತಾನದ ಜಿಡಿಪಿಗೆ ಶೇ.25ರಷ್ಟು ಕೊಡುಗೆ ನೀಡುತ್ತಿದ್ದ ಕೃಷಿ ವಲಯ ಇನ್ನು ನೀರಿನ ಅಭಾವದಿಂದ ನಷ್ಟ ಅನುಭವಿಸಬಹುದು. ಆಹಾರದ ಅಭದ್ರತೆ ಎದುರಾಗಬಹುದು. ನೀರಿಲ್ಲದೆ ಜಲವಿದ್ಯುತ್‌ ಘಟಕಗಳು ಸ್ಥಗಿತಗೊಂಡು ದೇಶದ ಅರ್ಧ ಭಾಗ ಕಗ್ಗತ್ತಲೆಯ ಕೂಪಕ್ಕೆ ಬೀಳಬಹುದು.

ಪಾಕ್‌ ಜತೆಗೆ ರಸ್ತೆ, ವಾಯು, ಜಲ ಮಾರ್ಗದ ಮೂಲಕ ನಡೆಯುತ್ತಿದ್ದ ಪ್ರತ್ಯಕ್ಷ ಹಾಗೂ ಪರೋಕ್ಷ ವ್ಯಾಪಾರ ನಿಷೇಧಿಸಲಾಗಿದೆ. ಎಲ್ಲಾ ರೀತಿಯ ರಫ್ತು ಆಮದು ನಿರ್ಬಂಧಿಸುವ ಮೂಲಕ ಪರೋಕ್ಷ ಸಮರ ಸಾರಲಾಗಿದೆ. ಭಾರತ- ಪಾಕಿಸ್ತಾನ ನಡುವೆ ವಾರ್ಷಿಕವಾಗಿ 2.41 ಶತಕೋಟಿ ಡಾಲರ್‌ ವ್ಯವಹಾರ ನಡೆಯುತ್ತಿತ್ತು. ಆದರೆ, ಪದೇಪದೆ ಉಗ್ರ ದಾಳಿಯ ಪರಿಣಾಮ ನೆರೆಯ ದೇಶದ ಜತೆಗಿನ ವ್ಯವಹಾರವನ್ನು ಭಾರತ ಕಡಿತಗೊಳಿಸಿದೆ. ಕಳೆದ 2 ವರ್ಷಗಳಲ್ಲಂತೂ ಆಮದು-ರಫ್ತು ಪ್ರಮಾಣ ಗಣನೀಯವಾಗಿ ಕುಸಿದಿದೆ. ಪಾಕ್‌ ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಲುಗುತ್ತಿದೆ. ಸದ್ಯದಲ್ಲೇ, ವಸ್ತುಗಳ ಬೆಲೆ ಗಗನ ಮುಟ್ಟಲಿದೆ. ಇದು ಜನಾಕ್ರೋಶಕ್ಕೆ ಕಾರಣವಾಗಲಿದೆ.

ಭಾರತವು ನೆರೆಯ ದೇಶದ ಸಾಗರ ಮಾರ್ಗವನ್ನೂ ನಿರ್ಬಂಧಿಸಿದೆ. ಭಾರತದ ಯಾವುದೇ ಬಂದರುಗಳನ್ನು ಬಳಸದಂತೆ ಪಾಕ್‌ಗೆ ಸೂಚಿಸಲಾಗಿದೆ. ಇದರಂತೆ, ಪಾಕಿಸ್ತಾನ ಧ್ವಜ ಹೊಂದಿದ ಯಾವುದೇ ಸರಕು ಹಡಗುಗಳು ಭಾರತದ ಬಂದರುಗಳಲ್ಲಿ ಲಂಗರು ಹಾಕುವಂತಿಲ್ಲ.ಇದರಿಂದ ಜಲಮಾರ್ಗದಲ್ಲಿ ವಿವಿಧ ದೇಶಗಳಿಂದ ಸರಕು ಹೊತ್ತು ಬರುತ್ತಿದ್ದ ಪಾಕಿಸ್ತಾನ ಹಡಗುಗಳಿಗೆ ಕೆಲಸವಿಲ್ಲದಾಗಿದೆ. ಇದರಿಂದಲೂ ವಸ್ತುಗಳ ಬೆಲೆ ಏರಲಿದೆ.

ಭಾರತ- ಪಾಕ್‌ ನಡುವೆ ನೇರ ವ್ಯಾಪಾರ ನಡೆಯುತ್ತಿದ್ದ ಅಟ್ಟಾರಿ- ವಾಘಾ ಗಡಿ ಬಂದ್‌ ಮಾಡಲಾಗಿದೆ. ಇದರಿಂದ 3,850 ಕೋಟಿ ರೂ. ವಹಿವಾಟು ಸ್ಥಗಿತಗೊಂಡಂತಾಗಿದೆ. ಉಭಯ ದೇಶಗಳ ನಡುವೆ ವ್ಯವಹಾರದ ಕೇಂದ್ರಬಿಂದುವಾಗಿದ್ದ ಅಮೃತ್‌ಸರದ ಭೂ ಬಂದರು ಮುಚ್ಚಲಾಗಿದೆ.ದಿನ ನಿತ್ಯ ತರಕಾರಿ, ಹಣ್ಣು, ಹಾಲು, ಅಗತ್ಯ ಬಳಕೆ ವಸ್ತುಗಳ ಸರಬರಾಜು ನಿಂತಿದೆ. ಮೂರನೆಯವರ ಮಧ್ಯಸ್ಥಿಕೆಯಲ್ಲಿ ಅಗತ್ಯ ವಸ್ತು ಖರೀದಿಸಬೇಕಾಗಿದೆ. ಇದರಿಂದಲೂ ಪಾಕ್‌ನಲ್ಲಿ ವಸ್ತುಗಳ ಬೆಲೆ ಏರಲಿದೆ. ಪಾಕಿಸ್ತಾನ ವಾರ್ಷಿಕವಾಗಿ 2 ಸಾವಿರ ಕೋಟಿ ರೂ. ನಷ್ಟ ಅನುಭವಿಸಲಿದೆ.

ಪಹಲ್ಗಾಮ್‌ನಲ್ಲಿನ ನರಮೇಧದ ಬಳಿಕ ಪಾಕಿಸ್ತಾನದ ಪ್ರಜೆಗಳಿಗೆ ನೀಡಲಾಗಿದ್ದ 14 ಮಾದರಿಯ ವೀಸಾಗಳನ್ನು ಭಾರತ ಈಗಾಗಲೇ ರದ್ದುಗೊಳಿಸಿದೆ. ರಕ್ಷಣೆ, ರಾಜತಾಂತ್ರಿಕ ಸಿಬ್ಬಂದಿಯನ್ನೂ ಪಾಕ್‌ಗೆ ಕಳಿಸಲಾಗಿದೆ. ಪಾಕ್‌ ಪ್ರಜೆಗಳನ್ನೂ ಗಡೀಪಾರು ಮಾಡಲಾಗಿದೆ.ಆರೋಗ್ಯ ಚಿಕಿತ್ಸೆ ಸೇರಿದಂತೆ ತುರ್ತು ವಿಚಾರಕ್ಕೆ, ವಿವಾಹ, ಶಿಕ್ಷಣ ಸೇರಿದಂತೆ ಯಾವುದೇ ನೆಪವೊಡ್ಡಿ ಪಾಕ್‌ ಪ್ರಜೆಗಳು ಭಾರತಕ್ಕೆ ಬರುವಂತಿಲ್ಲ.

ಭಾರತ- ಪಾಕ್‌ ನಡುವೆ ನೇರ ವಿಮಾನಯಾನ ಸೇವೆ ಸ್ಥಗಿತಗೊಳಿಸಲಾಗಿದೆ. ಉಭಯ ದೇಶಗಳ ವಿಮಾನಗಳು ತಮ್ಮ ವಾಯುಪ್ರದೇಶ ಬಳಸದಂತೆ ನಿರ್ಬಂಧಿಸಿವೆ.ಭಾರತದ ವಿಮಾನಗಳಿಗೆ ವಾಯು ಪ್ರದೇಶ ನಿಷೇಧಿಸಿದ ಕ್ರಮದಿಂದ ಪಾಕಿಸ್ತಾನ 100 ದಶಲಕ್ಷ ಡಾಲರ್‌ ಆದಾಯ ನಷ್ಟ ಅನುಭವಿಸಿದೆ.

ಪಾಕಿಸ್ತಾನದ ಸೆಲೆಬ್ರಿಟಿಗಳ ಯೂಟ್ಯೂಬ್‌ ಚಾನೆಲ್‌ಗಳು, ಸುದ್ದಿ ಸಂಸ್ಥೆಗಳ ಯೂಟ್ಯೂಬ್‌ ಚಾನೆಲ್‌ಗಳು, ಸಾಮಾಜಿಕ ಜಾಲತಾಣ ಖಾತೆಗಳನ್ನು ಭಾರತ ನಿಷೇಧಿಸಿದೆ. 16 ಯೂಟ್ಯೂಬ್‌ ಚಾನೆಲ್‌ಗಳು, ನಟ- ನಟಿಯರ ಸಾಮಾಜಿಕ ಜಾಲತಾಣ ಖಾತೆಗಳನ್ನೂ ನಿಷೇಧಿಸಲಾಗಿದೆ.ಇದು ಪಾಕ್‌ ತಾರೆಗಳ ಜನಪ್ರಿತೆಗೆ ಬಿದ್ದ ಬಹುದೊಡ್ಡ ಏಟು. ಭಾರತದಿಂದ ವೀಕ್ಷಣೆ ಪಡೆದು ಯೂಟ್ಯೂಬ್‌ಗಳಿಂದ ಅಷ್ಟೋ ಇಷ್ಟೋ ಸಂಪಾದಿಸುತ್ತಿದ್ದ ದುಡಿಮೆಗೂ ಕೊಕ್ಕೆ ಬಿದ್ದಂತಾಗಿದೆ. ಫವಾದ್‌ ಖಾನ್‌, ಆತಿಫ್‌ ಅಸ್ಲಾಮ್‌, ಹನಿಯಾ ಅಮಿರ್‌, ಮಹಿರಾ ಖಾನ್‌ ಸೇರಿದಂತೆ ಹಲವು ನಟ ನಟಿಯರ ಸಿನಿಮಾಗಳ ಬಿಡುಗಡೆಗೂ ಇದು ಕಂಟಕ.

ಪಾಕಿಸ್ತಾನದ ಜತೆ ನಡೆಯುತ್ತಿದ್ದ ಎಲ್ಲಾ ಮಾದರಿಯ ಅಂಚೆ ಸೇವೆಗಳನ್ನೂ ಭಾರತ ಸ್ಥಗಿತಗೊಳಿಸಿದೆ. ಜಲ, ವಾಯು, ರಸ್ತೆ ಮಾರ್ಗದ ಮೂಲಕ ನಡೆಯುತ್ತಿದ್ದ ಭೌತಿಕ ಅಂಚೆ, ಮೇಲ್‌, ಪಾರ್ಸಲ್‌ ಸೇವೆ ನಿಷೇಧಿಸಲಾಗಿದೆ.ಭಾರತದೊಂದಿಗೆ ನಂಟು ಹೊಂದಿದ್ದ ಪಾಕ್‌ ಕುಟುಂಬಗಳು ಸಂವಹನಕ್ಕೆ ಪರದಾಡಲಿವೆ.

ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ದೊರೆಯುತ್ತಿದ್ದ ಆರ್ಥಿಕ ನೆರವು ಸ್ಥಗಿತಗೊಳಿಸಲು ಭಾರತ ಮುಂದಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮೂಲಕ ಸಾಲ ಪಡೆಯುವುದನ್ನು ತಡೆಯಲು ಪ್ರಯತ್ನಿಸಲಾಗಿದೆ. ಜಾಗತಿಕ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲವನ್ನು ಅಭಿವೃದ್ಧಿಗೆ ಬಳಸದೆ ಉಗ್ರರ ಪೋಷಣೆಗೆ ಬಳಸುತ್ತಿರುವ ಪುರಾವೆ ಮಂಡಿಸಿ ಸಾಲ ಸೌಲಭ್ಯಕ್ಕೆ ಕತ್ತರಿ ಹಾಕುವುದು ಭಾರತದ ಉದ್ದೇಶ. ಇದೇ 9ರಂದು ನಡೆಯುವ ಐಎಂಎಫ್‌ ಕಾರ್ಯಕಾರಿ ಮಂಡಳಿ ಸಭೆಯಲ್ಲಿಪಾಕಿಸ್ತಾನಕ್ಕೆ ಸಾಲ ನೀಡದಂತೆ ಒತ್ತಡ ಹೆಚ್ಚಿಸಲು ಭಾರತ ನಿರ್ಧರಿಸಿದೆ.ಪಾಕ್‌ಗೆ ಇದು ಜಾಗತಿಕ ಮುಜುಗರ. ಐಎಂಎಫ್‌ ಸಾಲ ಪಡೆಯುವುದು ಕಗ್ಗಂಟಾಗಲಿದೆ. ಉಗ್ರಜಾಲಕ್ಕೆ ಫಂಡಿಂಗ್‌ ಕಷ್ಟವಾಗಲಿದೆ.

ಫೈನಾನ್ಷಿಯಲ್‌ ಆ್ಯಕ್ಷನ್‌ ಟಾಸ್ಕ್‌ ಫೋರ್ಸ್‌ ಮುಂದೆ ಪಾಕಿಸ್ತಾನದ ಉಗ್ರವಾದ ಬಯಲು ಮಾಡಲು ಭಾರತ ಸರಕಾರ ನಿರ್ಧರಿಸಿದೆ. 2018ರಲ್ಲಿ ಬೂದು ವಲಯಕ್ಕೆ ಸೇರ್ಪಡೆಯಾಗಿದ್ದ ಪಾಕಿಸ್ತಾನ, ಮೇಲ್ನೋಟಕ್ಕೆ ಉಗ್ರರ ವಿರುದ್ಧ ಕ್ರಮ ಕೈಗೊಂಡ ನಾಟಕವಾಡುವ ಮೂಲಕ 2022ರಲ್ಲಿ ಬೂದು ವಲಯದಿಂದ ಹೊರ ಬಂದಿತ್ತು. ಪಹಲ್ಗಾಮ್‌ ನರಮೇಧ ಬಳಿಕ ಉಗ್ರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ಬಂಡವಾಳ ಬಿಚ್ಚಿಡುವ ಮೂಲಕ ಗ್ರೇ (ಬೂದು) ವಲಯಕ್ಕೆ ಸೇರಿಸುವಂತೆ ಪ್ರಸ್ತಾವ ಮಂಡಿಸಲು ಭಾರತ ಮುಂದಾಗಿದೆ.ಒಂದು ವೇಳೆ ಪಾಕಿಸ್ತಾನ ಬೂದು ವಲಯಕ್ಕೆ ಸೇರ್ಪಡೆಯಾದರೆ ಜಾಗತಿಕ ಸಂಸ್ಥೆಗಳಿಂದ ಸಾಲ ಪಡೆಯುವ ಅವಕಾಶ ಕಳೆದುಕೊಳ್ಳಲಿದೆ. ಈಗಾಗಲೇ ಸಾಲದ ಸುಳಿಗೆ ಸಿಲುಕಿ ದಿವಾಳಿ ಅಂಚಿನಲ್ಲಿರುವ ಪಾಕಿಸ್ತಾನ ಮುಂದೊಂದು ದಿನ ಸಂಪೂರ್ಣ ದಿವಾಳಿಯಾಗುವುದರಲ್ಲಿ ಸಂಶಯವೇ ಇಲ್ಲ.

Related Articles

Leave a Reply

Your email address will not be published. Required fields are marked *

Back to top button