
ಬೆಂಗಳೂರು: ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿ ವಿಶ್ವದೆಲ್ಲೆಡೆ ಪರಿಚಿತ. ಆ ಮಾದರಿಯಲ್ಲಿಯೇ ಮಲ್ಲೇಶ್ವರಂನ ಸ್ಯಾಂಕಿ ಟ್ಯಾಂಕ್ ಕೆರೆಯಲ್ಲಿ ಕಾವೇರಿ ಆರತಿ ಮಾಡುವ ಕಾರ್ಯಕ್ರಮ ಆಯೋಜಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್ಎಸ್ಬಿ) ಮುಂದಾಗಿದೆ.
ಮಾರ್ಚ್ 21ರಂದು ಕಾವೇರಿ ನದಿಗೆ ಗೌರವ ಸಲ್ಲಿಸುವ ಕ್ರಮವಾಗಿ ಸ್ಯಾಂಕಿ ಟ್ಯಾಂಕ್ ಕೆರೆಯಲ್ಲಿ ಪೂಜೆಗೆ ಪೂರ್ವ ತಯಾರಿ ನಡೆದಿದೆ. ಅದಲ್ಲದೆ ಈ ಕಾರ್ಯಕ್ರಮವೂ ಗಿನ್ನಿಸ್ ದಾಖಲೆ ಮಾಡುವ ನಿಟ್ಟಿನಲ್ಲಿ ಜಲಮಂಡಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದೆ. ಕಾವೇರಿ ಆರತಿ ಮಾಡುವ ಬಗ್ಗೆ ಇತ್ತೀಚೆಗೆ ವಾರಣಾಸಿಗೆ ತೆರಳಿ ಸಚಿವ ಚಲುವರಾಯಸ್ವಾಮಿ ತಂಡ ಅಧ್ಯಯನ ಮಾಡಿದ್ದರು. ಈ ವಿಶೇಷ ಸಂಭ್ರಮಕ್ಕೆ ಉತ್ತರ ಪ್ರದೇಶದಿಂದ ವಿಮಾನದಲ್ಲಿ ಪುರೋಹಿತರನ್ನು ಕರೆತರಲಾಗುತ್ತಿದೆ.ಅದರಂತೆ ಬೆಂಗಳೂರಿನಲ್ಲೂ ಕಾವೇರಿ ಆರತಿ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಜಲಮಂಡಲಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತವರ ಕುಟುಂಬ ಸೇರಿ ಹತ್ತು ಸಾವಿರ ಜನರು ಭಾಗಿಯಾಗುವ ನಿರೀಕ್ಷೆಯಿದೆ.
ಶೇ.70ರಷ್ಟು ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ
ಶೇ.70ರಷ್ಟು ಬೆಂಗಳೂರಿಗರಿಗೆ ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆ. ದಿನಕ್ಕೆ 2,225 ಮಿಲಿಯನ್ ಲೀಟರ್ನಷ್ಟು ನೀರು ಬೆಂಗಳೂರಿಗೆ ಸರಬರಾಜು ಆಗುತ್ತಿದೆ. ಇಂತಹ ಬಿರು ಬಿಸಿಲು ಬೇಸಿಗೆಯಲ್ಲು ನೀರು ಒದಗಿಸುತ್ತಿರುವ ಜೀವನದಿಗೆ ಗೌರವ ಸಲ್ಲಿಸಲು ಸರ್ಕಾರ ಮುಂದಾಗಿದೆ.
LED ಟಿವಿಗಳಲ್ಲಿ ಆರತಿ ವೀಕ್ಷಿಸುವ ಅವಕಾಶ
ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗುವ ಸಾಧ್ಯತೆ ಇದೆ. ಆರತಿ ಬೆಳಗುವ ದೃಶ್ಯಾವಳಿಗಳನ್ನು LED ಟಿವಿಗಳಲ್ಲಿ ವೀಕ್ಷಿಸುವ ಅವಕಾಶ ಇರಲಿದೆ. ಜೊತೆಗೆ ಕೆರೆಯ ಸುತ್ತಮುತ್ತ ಲೈಟಿಂಗ್ಸ್ ವ್ಯವಸ್ಥೆ, ಲೈವ್ ಆರ್ಕೆಸ್ಟ್ರಾ ಇರಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದರು.ಆರತಿ ಬೆಳಗುವ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಜಲಮಂಡಲಿ ಇಲಾಖೆಯ ಅಧಿಕಾರಿಗಳು, ಕಾವೇರಿ ಮತ್ತು ಕನ್ನಿಕಾ, ಸುಜ್ಯೋತಿ ನದಿಗಳ ಸಂಗಮದ ಭಾಗಮಂಡಲದಿಂದ ತಂದ ನೀರನ್ನು ಪ್ರಸಾದವಾಗಿ ನೆರೆದವರಿಗೆ ವಿತರಣೆ ಮಾಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸ್ಯಾಂಕಿ ಟ್ಯಾಂಕ್ನಲ್ಲೇ ಕಾವೇರಿ ಆರತಿ ಯಾಕೆ?
“ಸ್ಯಾಂಕಿ ಟ್ಯಾಂಕ್ ಕೆರೆ ಬೆಂಗಳೂರಿನಲ್ಲಿ ಅತಿ ಸ್ವಚ್ಛವಾಗಿರುವಂತದ್ದು, ಇಲ್ಲಿ ಜನರು ಸೇರುವುದಕ್ಕೂ ಸೂಕ್ತ ವ್ಯವಸ್ಥೆ ಇರುವ ಕಾರಣ ಇದೆ ಪ್ರದೇಶ ಆಯ್ಕೆ ಮಾಡಿಕೊಂಡೆವು. ಗಾಳಿ ಆಂಜನೇಯ ದೇವಸ್ಥಾನ, ಸಹ ಲಿಸ್ಟ್ನಲ್ಲಿತ್ತು. ಆದರೆ, ದೇಗುಲದ ಸಮೀಪ ಚರಂಡಿ ಇದ್ದ ಕಾರಣ ಕೈಬಿಡಲಾಯಿತು. ಆದರೆ, ಸ್ಯಾಂಕಿ ಕೆರೆಯಲ್ಲೇ ಕಾವೇರಿ ಆರತಿ ಮಾಡಲು ಕಾರಣವೆಂದರೆ, ಕಾವೇರಿಯ ಉಪನದಿ ವೃಷಭಾವತಿ, ಅದರ ಉಗಮ ಸ್ಥಾನ ಸ್ಯಾಂಕಿ ಕೆರೆ ಹಿನ್ನೆಲೆ, ಇಲ್ಲೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ಸ್ಯಾಂಕಿ ಕೆರೆ ಸಮೀಪ ಜಲಗಂಗಮ್ಮ ದೇವಸ್ಥಾನವನ್ನು ಇತಿಹಾಸದಲ್ಲಿ ನಿರ್ಮಿಸಲಾಗಿತ್ತು. ಇದು ವೃಷಭಾವತಿ ಉಗಮದ ಸಂಕೇತ. ಕೆಲವರು ಬಸವನಗುಡಿಯ ನಂದಿ ಪಾದದಿಂದ ನೀರು ಉದ್ಭವಿಸಿತು ಎಂಬ ವಾದವು ಇದೆ” ಎಂದು ಜಲಮಂಡಲಿ ಅಧಿಕಾರಿಯೊಬ್ಬರು ತಿಳಿಸಿದರು.