ಕ್ರೈಂ
Trending

ಮ್ಯಾನೇಜರ್‌ ಕಿರುಕುಳ, ಅತಿಯಾದ ಕೆಲಸ! ಒತ್ತಡ ತಾಳಲಾರದೆ ಸಾವಿಗೆ ಶರಣಾದ ಬೆಂಗಳೂರಿನ ಟೆಕ್ಕಿ

ಬೆಂಗಳೂರು: ಅತಿಯಾದ ಕೆಲಸದ ಒತ್ತಡ ಮತ್ತು ಮ್ಯಾನೇಜರ್ ನೀಡುತ್ತಿದ್ದ ಕೆಲಸದ ಒತ್ತಡದಿಂದ AI ಕಂಪನಿಯಲ್ಲಿ ಮೆಷಿನ್ ಲರ್ನಿಂಗ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ನಿಖಿಲ್ ಸೋಮವಂಶಿ (25) ಆತ್ಮಹತ್ಯೆಗೆ ಶರಣಾಗಿದ್ದಾರೆ. ಟೆಕ್ಕಿಯ ಮೃತದೇಹ ಆಗರ ಕೆರೆಯಲ್ಲಿ ಪತ್ತೆಯಾಗಿದೆ.ಕೋರಮಂಗಲ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಯ AI ಘಟಕದಲ್ಲಿ ನಿಖಿಲ್ ಸೋಮವಂಶಿ ಮೆಷಿನ್ ಲರ್ನಿಂಗ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಈತನ ಮೃತದೇಹ ಮೇ 8ರಂದು ಅಗರ ಕೆರೆಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಆತ್ಮಹತ್ಯೆಗೆ ಕಂಪನಿಯ ಕಠಿಣ ಕೆಲಸದ ವಾತಾವರಣ ಮತ್ತು ಕಿರುಕುಳ ನೀಡುತ್ತಿದ್ದ ಮ್ಯಾನೇಜರ್ ಎಂದು ಆರೋಪಿಸಲಾಗಿದೆ. ಉನ್ನತ ವ್ಯಾಸಂಗ ಮಾಡಿದ್ದ ನಿಖಿಲ್, ಕೆಲಸದ ಒತ್ತಡ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಿಖಿಲ್ ಸೋಮವಂಶಿ IISc ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಆಗಸ್ಟ್ 2024 ರಲ್ಲಿ ಕೆಲಸಕ್ಕೆ ಸೇರಿದರು. ವಾರ್ಷಿಕವಾಗಿ 9.30 ಲಕ್ಷ ರೂ. ವೇತನ ಪಡೆದುಕೊಳ್ಳುತ್ತಿದ್ದರು. ಆದರೆ, ಅಮೆರಿಕದಲ್ಲಿರುವ ಮ್ಯಾನೇಜರ್ ರಾಜ್‌ಕಿರಣ್ ಪನುಗಂಟಿ ಎಂಬುವವರ ಕಿರುಕುಳದಿಂದ ಹಲವರು ಕೆಲಸ ಬಿಟ್ಟಿದ್ದರು. ಬಳಿಕ ಅವರೆಲ್ಲರ ಕೆಲಸವನ್ನೂ ನಿಖಿಲ್ ಒಬ್ಬರೇ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಇದೀಗ ಮ್ಯಾನೇಜರ್‌ ನೀಡಿದ ದೌರ್ಜನಕ್ಕೆ ಯುವ ಇಂಜಿನಿಯರ್‌ ನಿಖಿಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಮ್ಯಾನೇಜರ್ ರಾಜ್‌ಕಿರಣ ಪನುಗಂಟಿ ಹೊಸಬರನ್ನು ದಬ್ಬಾಳಿಕೆಯ ಧಾಟಿಯಲ್ಲಿ ಮಾತನಾಡಿಸುತ್ತಿದ್ದರು. ಇದರಿಂದ ಕಠಿಣ ವಾತಾವರಣ ಸೃಷ್ಟಿಯಾಗಿತ್ತು. ಮ್ಯಾನೇಜರ್‌ನ ವರ್ತನೆಯಿಂದ ಬೇಸತ್ತು ಹಲವರು ಕೆಲಸಕ್ಕೆ ರಾಜೀನಾಮೆ ನೀಡಿದರುʼ ರೆಡ್ಡಿಟ್‌ನಲ್ಲಿ ಕೆಲ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ‘ನಿಖಿಲ್ ಸಾವಿನ ನಂತರವೂ ಮ್ಯಾನೇಜರ್ ಉದ್ಯೋಗಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ. ಸಂಸ್ಥೆಯ ಉದ್ಯೋಗಿಗಳು ತಮ್ಮ ಹೆಸರನ್ನು ಹೇಳಲು ಇಷ್ಟಪಡುತ್ತಿಲ್ಲ. ಆದರೆ, ಮ್ಯಾನೇಜರ್ ಬಹಳ ದಿನಗಳಿಂದ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಕಿರಿಯ ಉದ್ಯೋಗಿಗಳನ್ನು ಕೀಳಾಗಿ ಕಾಣುತ್ತಿದ್ದಾರೆ. ಅವರಿಗೆ ಏನೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆʼ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ AI ಸಂಸ್ಥೆಯ ವಕ್ತಾರರು ಪ್ರತಿಕ್ರಿಯಿಸಿದ್ದು, ‘ನಿಖಿಲ್ ಸಾವಿನಿಂದ ನಮಗೆ ತುಂಬಾ ದುಃಖವಾಗಿದೆ. ನಾವು ತನಿಖೆಗೆ ಸಹಾಯ ಮಾಡುತ್ತಿದ್ದೇವೆ. ಏಪ್ರಿಲ್ 8 ರಂದು ನಿಖಿಲ್ ಮ್ಯಾನೇಜರ್ ಬಳಿ ರಜೆ ಕೇಳಿದ್ದರು. ಅವರಿಗೆ ತಕ್ಷಣ ರಜೆ ನೀಡಲಾಗಿತ್ತು. ಏಪ್ರಿಲ್ 17 ರಂದು ಅವರು ಚೇತರಿಸಿಕೊಂಡಿದ್ದೇನೆ ಎಂದು ಹೇಳಿದರು. ಆದರೆ, ಇನ್ನೂ ಸ್ವಲ್ಪ ದಿನ ರಜೆ ಬೇಕು ಎಂದಿದ್ದಕ್ಕೆ ರಜೆಯನ್ನು ಮುಂದುವರಿಸಲಾಗಿತ್ತುʼ ಎಂದು ಕಂಪನಿ ಇಮೇಲ್ ಮೂಲಕ ರಾಷ್ಟ್ರೀಯ ಮಾಧ್ಯವೊಂದಕ್ಕೆ ತಿಳಿಸಿದೆ.

ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ಈ ಆರೋಪಗಳನ್ನು ನಿಜವೆಂದು ಹೇಳಿದ್ದಾರೆ. ‘ಕೆಲಸದ ಒತ್ತಡದಿಂದ ಬೇಸತ್ತು ನಾನು ಬೇರೆ ಕೆಲಸ ಹುಡುಕಿಕೊಳ್ಳದೆ ರಾಜೀನಾಮೆ ನೀಡಿದೆ. ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಗಳು ಬರುತ್ತಿದ್ದವುʼ ಎಂದು ಹೇಳಿದ್ದಾರೆ. ಮ್ಯಾನೇಜರ್‌ ರಾಜ್‌ಕಿರಣ್ ಪನುಗಂಟಿ ಜೊತೆ ಕೆಲಸ ಮಾಡಿದ ಮತ್ತೊಬ್ಬ ಉದ್ಯೋಗಿ ಪ್ರತಿಕ್ರಿಯಿಸಿದ್ದು, ‘ರಾಜ್‌ಕಿರಣ್‌ಗೆ ಜನರನ್ನು ಹೇಗೆ ನಡೆಸಿಕೊಳ್ಳಬೇಕೆಂದು ತಿಳಿದಿಲ್ಲ. ಅವರು ಉದ್ಯೋಗಿಗಳ ಮೇಲೆ ಕೂಗಾಡುತ್ತಾರೆ. ಮೀಟಿಂಗ್‌ಗಳಲ್ಲಿ ಬೈಯುವುದು ತುಂಬಾ ಆಘಾತಕಾರಿಯಾಗಿತ್ತುʼ ಎಂದಿದ್ದಾರೆ.


Related Articles

Leave a Reply

Your email address will not be published. Required fields are marked *

Back to top button