
ತೀವ್ರ ಹಗ್ಗಜಗ್ಗಾಟದ ಬಳಿಕ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ವಿಧಾನ ಪರಿಷತ್ಗೆ ನಾಲ್ಕು ಅಭ್ಯರ್ಥಿಗಳ ನಾಮನಿರ್ದೇಶನ ಪಟ್ಟಿಯನ್ನು ಅಂತಿಮಗೊಳಿಸಿದೆ.
ಪರಿಷತ್ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನಕ್ಕಾಗಿ ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು, ಎನ್ಆರ್ಐ ಸೆಲ್ ಮುಖ್ಯಸ್ಥೆ ಆರತಿ ಕೃಷ್ಣ, ಹುಬ್ಬಳ್ಳಿ ಧಾರವಾಡ ದಲಿತ ಮುಖಂಡ ಜಕ್ಕಪ್ಪನವರ್ ಹಾಗೂ ಮೈಸೂರು ಮೂಲದ ಪತ್ರಕರ್ತ ಶಿವಕುಮಾರ್ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದಿನ ಪಟ್ಟಿಗೆ ತೀವ್ರ ವಿರೋಧ: ಆ ಮೂಲಕ ಈ ಮುಂಚೆ ಸೂಚಿಸಲಾಗಿದ್ದ ಹೆಸರುಗಳಾದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಡಿ.ಜಿ.ಸಾಗರ್ ಹೆಸರನ್ನು ಕೈಬಿಡಲಾಗಿದೆ. ಎರಡು ತಿಂಗಳ ಹಿಂದೆ ಕೆಪಿಸಿಸಿ ಮಾಧ್ಯಮ ಘಟಕ ಅಧ್ಯಕ್ಷ ರಮೇಶ್ ಬಾಬು, ಎನ್ಆರ್ಐ ಸೆಲ್ ಮುಖ್ಯಸ್ಥೆ ಆರತಿ ಕೃಷ್ಣ, ಪಕ್ಷದ ಮುಖಂಡ ಡಿ.ಜಿ.ಸಾಗರ್ ಹಾಗೂ ದಿನೇಶ್ ಅಮೀನ್ ಮಟ್ಟು ಅವರ ಹೆಸರಿರುವ ಪಟ್ಟಿಯನ್ನು ಕಳುಹಿಸಿಕೊಡಲಾಗಿತ್ತು. ಆದರೆ, ಇದಕ್ಕೆ ರಾಜ್ಯ ಕಾಂಗ್ರೆಸ್ನ ಕೆಲ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಇಬ್ಬರನ್ನು ಕೈಬಿಟ್ಟ ಹೈಕಮಾಂಡ್: ನಾಮನಿರ್ದೇಶನ ಮಾಡಲು ಅನುಮೋದಿಸಿರುವ ಈ ಹಿಂದಿನ ಹೆಸರುಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್ನ ಕೆಲವು ನಾಯಕರು ಪಕ್ಷದ ವರಿಷ್ಠರಿಗೆ ದೂರು ನೀಡಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ, ಹೈಕಮಾಂಡ್ ವಿಧಾನ ಪರಿಷತ್ತಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದೀಗ ಈ ಹಿಂದಿನ ಪಟ್ಟಿಯಲ್ಲಿನ ಇಬ್ಬರನ್ನು ಕೈಬಿಟ್ಟು ಪರಿಷ್ಕೃತ ನಾಲ್ವರು ಅಭ್ಯರ್ಥಿಗಳ ನಾಮನಿರ್ದೇಶನ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.