ಇತ್ತೀಚಿನ ಸುದ್ದಿ
Trending

'ದೈಜಿ' ಎಂದರೇನು? ರಮೇಶ್ ಅರವಿಂದ್​ 61ನೇ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯ್ತು ಹಾರರ್ ಟೀಸರ್

ತಮ್ಮ ಅಮೋಘ ಅಭಿನಯದಿಂದ ಕನ್ನಡ ಸಿನಿಮಾ ಪ್ರೇಕ್ಷಕರ ಮನಗೆದ್ದಿರುವ ಹೆಸರಾಂತ ನಟ ರಮೇಶ್ ಅರವಿಂದ್ ಬುಧವಾರ 61ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ನಟ ಪ್ರಮುಖಪಾತ್ರದಲ್ಲಿ ನಟಿಸಿರುವ ‘ದೈಜಿ’ ಚಿತ್ರತಂಡ ಟೀಸರ್ ಬಿಡುಗಡೆ ಮಾಡೋ ಮೂಲಕ ವಿಶೇಷವಾಗಿ ಶುಭ ಕೋರಿದೆ. ಟೀಸರ್​ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಉತ್ತಮ ವೀಕ್ಷಣೆ ಕಾಣುತ್ತಿದೆ.

ಟೀಸರ್​ ರಿಲೀಸ್ ಈವೆಂಟ್​ನಲ್ಲಿ ಮಾತನಾಡಿದ ನಾಯಕ ನಟ ರಮೇಶ್ ಅರವಿಂದ್, ”ಹುಟ್ಟು – ಸಾವು ಬಾಳಿನಲ್ಲಿ ಎರಡು ಕೊನೆಗಳು ಎಂಬ ಸಾಲಿದೆ. ಆದರೆ ಇವೆರಡರ ಮಧ್ಯೆ ಏನಿದೆ? ಇವೆರಡರ ಮಧ್ಯೆ ಪ್ರೀತಿ ಇದೆ. ಒಂದು ವೇಳೆ ಸಾವೇ ಕೊನೆಯಾಗದಿದ್ದರೆ ಏನಿರುತ್ತದೆ? ಅದರ ಆಚೆಗೆ ಒಂದು ದುಷ್ಟ ಶಕ್ತಿ ಇರುತ್ತದೆ. ಆ ಶಕ್ತಿ ಈ ಪ್ರೀತಿಯನ್ನು ಹೊತ್ತುಕೊಂಡು ಹೊಗುತ್ತದೆ. ಇದನ್ನೇ ನಾವು ಸಾಮಾನ್ಯ ಹಾರರ್ ಚಿತ್ರಗಳಲ್ಲಿ ಕಾಣುವುದು”.

”ಆದರೆ, ನಿರ್ದೇಶಕ ಆಕಾಶ್ ಶ್ರೀವತ್ಸ ಈ ರೀತಿಯ ಹಾರರ್ ಸಿನಿಮಾ ಮಾಡಿಲ್ಲ. ಈವರೆಗೂ ನಾನು ಸಾಕಷ್ಟು ಹಾರರ್ ಸಿನಿಮಾ ನೋಡಿದ್ದೇನೆ. ಆದರೆ ಈ ರೀತಿಯ ಕಥೆಯನ್ನು ನಾನು ನೋಡಿಲ್ಲ. ಅಂಥ ಚಿತ್ರ ಮಾಡಿದ್ದಾರೆ ನಿರ್ದೇಶಕರು. ನಾನು ಬಾಲಚಂದರ್ ಅವರಂತಹ ಹೆಸರಾಂತ ನಿರ್ದೇಶಕರ ಜೊತೆಗೆ 10 ಸಿನಿಮಾ ಮಾಡಿದ್ದೇನೆ. ಮುಂದೆ ಶ್ರೀವತ್ಸ ಅವರ ಜೊತೆಗೂ ಇದೇ ರೀತಿ ಹೆಚ್ಚಿನ ಸಿನಿಮಾಗಳನ್ನು ಮಾಡುತ್ತೇನೆ. ಇನ್ನೂ, ನಿರ್ಮಾಪಕ ರವಿ ಕಶ್ಯಪ್ ಅವರ ಸಿನಿಮಾ ಪ್ರೀತಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ರಾಧಿಕಾ ನಾರಾಯಣ್ ಅವರಂತೂ ಮಹಾನಟಿ. ದಿಗಂತ್ ಅವರ ಲವಲವಿಕೆ ನನಗೆ ಬಹಳ ಇಷ್ಟ. ಈ ಚಿತ್ರದಲ್ಲಿ ವಿದೇಶದ ಪ್ರಸಿದ್ಧ ಕಲಾವಿದರೊಂದಿಗೂ ನಟಿಸಿದ್ದೇನೆ. ನಮ್ಮ ಈ ದೈಜಿ ಚಿತ್ರವನ್ನು ಆದಷ್ಟು ಬೇಗ ತೆರೆಮೇಲೆ ನೋಡಲು ಕಾತುರ‌ನಾಗಿದ್ದೇನೆ” ಎಂದು ತಿಳಿಸಿದರು.

ನಿರ್ದೇಶಕ ಆಕಾಶ್ ಶ್ರೀವತ್ಸ ಮಾತನಾಡಿ, ”ಸಂಖ್ಯಾಶಾಸ್ತ್ರದ ಪ್ರಕಾರ 3 ಅಂಕಿಗೂ, ನನಗೂ ಹಾಗೂ ಈ ಚಿತ್ರಕ್ಕೂ ನಂಟಿದೆ. ಹೇಗೆಂದರೆ,‌ ಇದು ನನ್ನ ನಿರ್ದೇಶನದಲ್ಲಿ ರಮೇಶ್ ಅರವಿಂದ್ ಅವರು ನಾಯಕರಾಗಿ ನಟಿಸಿರುವ 3ನೇ ಸಿನಿಮಾ. ನಟಿ ರಾಧಿಕಾ ನಾರಾಯಣ್ ಅವರ ಜೊತೆಗೂ 3ನೇ ಸಿನಿಮಾ. ನನ್ನ ಹಾಗೂ ನಿರ್ಮಾಪಕರ ಕಾಂಬಿನೇಶನ್​​ನ 3ನೇ ಚಿತ್ರವೂ ಹೌದು. ಹೀಗೆ ಮೂರರ ನಂಟನ್ನು ಉದಾಹರಿಸಬಲ್ಲೆ. ನಿರ್ಮಾಪಕರು ವಿದೇಶದಲ್ಲಿ ತಾವು ಕಂಡ ನೈಜ ಘಟನೆಯನ್ನು ನನಗೆ ಹೇಳಿದರು. ಅವರು ಹೇಳಿದ ಕಥೆಯೇ ದೈಜಿ ಚಿತ್ರಕ್ಕೆ ಸ್ಪೂರ್ತಿ. ನಂತರ ಈ ಕಥೆಗೆ ರಮೇಶ್ ಅರವಿಂದ್ ಅವರೇ ಸೂಕ್ತ ಎನಿಸಿ, ಅವರಿಗೆ ಕಥೆ ಹೇಳಿದಾಗ, ಅವರು ನಟಿಸಲು ಒಪ್ಪಿಕೊಂಡಿದ್ದು ಬಹಳ ಖುಷಿಯಾಯಿತು. ಸೂರ್ಯ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ರಾಧಿಕಾ ನಾರಾಯಣ್ ಅವರು ಭೂಮಿ ಪಾತ್ರದಲ್ಲಿ ಹಾಗೂ ರಮೇಶ್ ಅವರ ತಮ್ಮನಾಗಿ ನಟ ದಿಗಂತ್ ಗಗನ್ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ” ಎಂದು ಮಾಹಿತಿ ನೀಡಿದರು.

ದೈಜಿ ಎಂದರೇನು?: ದೈಜಿ ಎಂದರೆ ಪ್ರೇತಾತ್ಮಗಳ ದೈವ ಎಂದರ್ಥ. ಇಂದು ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಟ್ರೇಲರ್ ಸಹ ಬರಲಿದ್ದು, ವರ್ಷದ ಕೊನೆ ಅಥವಾ ನೂತನ ವರ್ಷದ ಆರಂಭಕ್ಕೆ ದೈಜಿ ನಿಮಗೆ ದರ್ಶನ ಕೊಡಲಿದೆ ಎಂದು ಆಕಾಶ್ ಶ್ರೀವತ್ಸ ತಿಳಿಸಿದರು.ನಿರ್ಮಾಪಕ ರವಿ ಕಶ್ಯಪ್ ಮಾತನಾಡಿ, ”10 ವರ್ಷಗಳ ಹಿಂದೆ ನಾನು‌, ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಈ ಚಿತ್ರದ ಬಗ್ಗೆ ಹೇಳಿದ್ದೆ. ಈಗ ಕಾಲ ಕೂಡಿ ಬಂದಿದೆ. ಇದು ವಿದೇಶದಲ್ಲಿ ನಾನು ಕಂಡಿರುವ ನೈಜ ಘಟನೆ ಆಧರಿಸಿದ ಸಿನಿಮಾ. ಇದನ್ನು ನಾನು ಅಂದುಕೊಂಡಂತೆ ತೆರೆಗೆ ತರುತ್ತಿರುವ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಧನ್ಯವಾದಗಳು. ಯಾವುದೇ ಹಾಲಿವುಡ್ ಚಿತ್ರಕ್ಕೆ ಕಡಿಮೆ ಇಲ್ಲದಂತೆ ಮೂಡಿಬಂದಿರುವ ನಮ್ಮ ದೈಜಿ ಚಿತ್ರವನ್ನು ಶೀಘ್ರವೇ ನಿಮ್ಮ ಮುಂದೆ ತರುತ್ತೇವೆ” ಎಂದು ತಿಳಿಸಿದರು.

ಚಿತ್ರದಲ್ಲಿ ಬಿ.ಎಂ.ಗಿರಿರಾಜ್ ನಟಿಸಿದ್ದಾರೆ. ಬರಹಗಾರರಾಗಿ ಅಭಿಜಿತ್ ಚಿತ್ರತಂಡದ ಭಾಗವಾಗಿದ್ದಾರೆ. ಕಾಸ್ಟಿಂಗ್ ಡೈರೆಕ್ಟರ್ ಸುನಯನ ಸುರೇಶ್. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಕಲನವಿರುವ ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸ ಅವರೇ ಸಂಕಲನ ನಿರ್ವಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button