ಮೈಸೂರು ರಾಜವಂಶಸ್ಥರಿಗೆ 3,400 ಕೋಟಿ ರೂ. ಟಿಡಿಆರ್ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಬೆಂಗಳೂರು ಅರಮನೆಯ ಭೂಮಿಯ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮೈಸೂರು ರಾಜವಂಶಸ್ಥರು ಹಾಗೂ ಕರ್ನಾಟಕ ಸರ್ಕಾರದ ನಡೆಯುತ್ತಿದ್ದ ವ್ಯಾಜ್ಯವೊಂದಕ್ಕೆ ಪೂರ್ಣವಿರಾಮ ಬಿದ್ದಿದೆ. 90ರ ದಶಕದಲ್ಲಿ ರಸ್ತೆಗಳ ಅಗಲೀಕರಣಕ್ಕಾಗಿ ಕರ್ನಾಟಕ ಸರ್ಕಾರದ ವತಿಯಿಂದ ಸ್ವಾಧೀನಪಡಿಸಿಕೊಳ್ಳಲಾಗಿದ್ದ ಅರಮನೆ ಮೈದಾನದ ಭಾಗಕ್ಕೆ ಅನುಗುಣವಾಗಿ 3,400 ಕೋಟಿ ರೂ. ಮೊತ್ತದ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನು (ಟಿಡಿಆರ್) ಮೈಸೂರು ಸಂಸ್ಥಾನದ ಮಾಜಿ ಮಹಾರಾಜ ಶ್ರೀಕಂಠದತ್ತ ಒಡೆಯರ್ ಅವರ ಕಾನೂನುಬದ್ಧ ವಾರಸುದಾರರಿಗೆ 3,400 ಕೋಟಿ ರೂ. ಮೊತ್ತದ ಟ್ರಾನ್ಸ್ ಫರಬಲ್ ಡೆವಲಪ್ ಮೆಂಟ್ ರೈಟ್ಸ್ (ಟಿಡಿಆರ್) ನೀಡಬೇಕೆಂದು ಸುಪ್ರೀಂ ಕೋರ್ಟ್, ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಎಲ್ಲಾ ಆಕ್ಷೇಪಣೆಗಳನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಹಾಗೂ ಅರವಿಂದ್ ಕುಮಾರ್ ಅವರುಳ್ಳ ಪೀಠ, ರಾಜವಂಶಸ್ಥರಾದ ದಿವಂಗತ ಶ್ರೀಕಂಠದತ್ತ ಒಡೆಯರ್ ಹಾಗೂ ಈ ಕೇಸ್ ಗೆ ಸಂಬಂಧಿಸಿದ ಇತರರಿಗೆ ಟಿಡಿಆರ್ ಮೊತ್ತವನ್ನು ನೀಡಬೇಕೆಂದು ಸೂಚಿಸಿತು.
ಬೆಂಗಳೂರು ಅರಮನೆಗೆ ಸೇರಿದ 15 ಎಕರೆ ಪ್ರದೇಶವನ್ನು ಬಳ್ಳಾರಿ ಹಾಗೂ ಜಯಮಹಲ್ ರಸ್ತೆಗಳ ಅಭಿವೃದ್ಧಿಗಾಗಿ 1994ರಲ್ಲಿ ಕರ್ನಾಟಕ ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಆಗ, ಸ್ವಾಧೀನಪಡಿಸಿಕೊಂಡಿರುವ ಭೂಮಿಯ ಬೆಲೆಯನ್ನು 11 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಅದರ ವಿರುದ್ಧ ಅಸಮಾಗೊಂಡಿರುವ ಮೈಸೂರಿನ ಮಹಾರಾಜರ ಮನೆತನ ಅದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿತ್ತು.ಇತ್ತೀಚೆಗೆ, ಅಂದರೆ, ಫೆಬ್ರವರಿಯಲ್ಲಿ ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ನೀಡಿ, ರಾಜಮನೆತನಕ್ಕೆ 3,400 ಕೋಟಿ ರೂ.ಗಳನ್ನು ಟಿಡಿಆರ್ ನೀಡುವಂತೆ ಸೂಚಿಸಿತ್ತು. ಆದರೆ, ಅದರ ವಿರುದ್ಧ ತೀರ್ಪು ಪುನರ್ ಪರಿಶೀಲನಾ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತಲ್ಲದೆ, ಒಂದು ವೇಳೆ, ನ್ಯಾಯಾಲಯದ ಆದೇಶ ಪಾಲನೆ ಮಾಡಲೇಬೇಕು ಎಂದಾದರೆ, ತಾನು ನ್ಯಾಯಾಲಯಕ್ಕೆ 3,400 ಕೋಟಿ ರೂ. ಸಲ್ಲಿಸುವುದಾಗಿ ಹೇಳಿತ್ತು. ಆ ಅರ್ಜಿಯ ವಿಚಾರಣೆಯ ತೀರ್ಪು ಮೇ 22ರಂದು ಹೊರಬಿದ್ದಿದ್ದು, ಅದರಲ್ಲಿ ಆ ಹಣವನ್ನು ನೇರವಾಗಿ ರಾಜಮನೆತನದವರಿಗೇ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.